Wednesday 8 March 2017

ಅವಳೆಂದರೆ...!!! ಸಂಚಿಕೆ - ೧


ಸಂಚಿಕೆ - ೧

ಗಂಟೆ 8 ಆದರೂ ಅದ್ಯಾಕೋ ಅವತ್ತು ಏಳೋ ಮನಸ್ಸೇ ಆಗಲಿಲ್ಲ. ಸಾಮಾನ್ಯವಾಗಿ 6.30 ರ ಮೇಲೆ ಮಲಗೋ ಜಾಯಮಾನವೇ ನನ್ನದಲ್ಲ. ಇವತ್ತು ಮಾತ್ರ ಇನ್ನೂ ಮಲಗೋಣ ಅಂತ ಅನ್ನಿಸುತ್ತಾ ಇತ್ತು. ಹಾಗೇ ಹಾಸಿಗೆಯಲ್ಲಿ ಹೊರಳುತ್ತಾ ಬಲ ಮಗ್ಗುಲಿಗೆ ತಿರುಗಿದವಳಿಗೆ ಮೊದಲು ಕಾಣಿಸಿದ್ದು ನನ್ನ ಟೇಬಲ್ ಮೇಲಿಟ್ಟಿದ್ದ ಕ್ಯಾಲೆಂಡರ್. ಅಬ್ಬಾ ಒಂದು ವಾರದ ಮೇಲಾಯಿತಲ್ಲವೇ ನಾವು ಬೆಂಗಳೂರಿಗೆ ಬಂದು.!

ನಾನು ಹುಟ್ಟಿದ್ದುಬೆಳೆದಿದ್ದು ಎಲ್ಲಾ ಮಹಾರಾಷ್ಟ್ರದಲ್ಲಿ. ಅಪ್ಪಂಗೆ Bank of Maharashtra ದಲ್ಲಿ ಕೆಲಸ. ಅಲ್ಲೇ ಓದನ್ನ ಮುಗಿಸಿದ ಮೇಲೆ Infosys ನಲ್ಲಿ ನಂಗೆ Job ಆಗಿದ್ದರಿಂದ ಅಪ್ಪ ಕೂಡ ಬೆಂಗಳೂರಿನ branch ಗೆ ವರ್ಗಾವಣೆ ತೆಗೆದುಕೊಂಡರು. ಬೆಂಗಳೂರಿಗೆ ಮೊದಲ ಸಲ ಬರ್ತಾ ಇದ್ರೂ ಕೂಡ, ಮೊದಲ ಸಲ ಅಂತ ಅನ್ನಿಸಲೇ ಇಲ್ಲ. ಯಾಕ್ ಗೊತ್ತ, ನಮ್ಮ ಅಪ್ಪ-ಅಮ್ಮ ಮೂಲತಃ ಕರ್ನಾಟಕದ ಮಲೆನಾಡಿನ ಒಂದು ಸಣ್ಣ ಹಳ್ಳಿಯವರು. ಕಾರಣ ಗೊತ್ತಿಲ್ಲ, ಆದರೆ ಅವರು 25 ವರುಷದಿಂದ ಮಹಾರಾಷ್ಟ್ರದಲ್ಲೆ settle ಆಗಿದ್ದರು. ಅಪ್ಪ-ಅಮ್ಮ ನನ್ನನ್ನ ಅಪ್ಪಟ ಕನ್ನಡತಿಯಾಗೇ ಬೆಳೆಸಿದ್ದರು. ಹಾಗಾಗಿ ಇಲ್ಲಿನ ವಾತಾವರಣ ನಂಗೆ ತುಂಬಾ different ಅಂತ ಅನ್ನಿಸಲೇ ಇಲ್ಲ.

ಹಾಗೇ ಎದ್ದು, ಅಲ್ಪ-ಸ್ವಲ್ಪ ಬಾಕಿ ಇದ್ದ ಮನೆಸಾಮಾನುಗಳನ್ನು ಜೋಡಿಸಿ, ಅಮ್ಮಂಗೆ ಮನೆ ಕ್ಲೀನ್ ಮಾಡಿ-ಅಡುಗೆ ಮಾಡೋಕೆ ಸಹಾಯ ಮಾಡಿ, ಹಾಗೆ-ಹೀಗೆ ಅನ್ನುವಷ್ಟರಲ್ಲೇ ಸಂಜೆ 4 ಗಂಟೆಯಾಗಿತ್ತು. Office ನಲ್ಲಿ ಹೊಸದಾಗಿ ಪರಿಚಯವಾದ ಗೆಳತಿಯೊಬ್ಬಳು ಅವರ ಮನೆಗೆ ಕರೆದಿದ್ದಳು. ಅವರ ಮನೆ ನಮ್ಮ Road ನ Cornerನಲ್ಲೆ ಇತ್ತು. ಶನಿವಾರ ಬೇರೆ ಆಗಿದ್ರಿಂದ, ಮಾಡೋಕೆ ಬೇರೆ ಏನೂ ಕೆಲಸ ಕೂಡ ಇರಲಿಲ್ಲವಾಗಿದ್ದರಿಂದ ಅವರ ಮನೆಗೆ ಹೋಗೋಣ ಅಂತ ಹೊರಟೆ.

ಅಲ್ಲಿ ಅವರ ಮನೆಯ terrace ನಲ್ಲಿ ಕುಳಿತು ಇಬ್ಬರು ಹರಟುತ್ತಿದ್ದರೆ ಇಬ್ಬರಿಗೂ ಸಮಯ ಸರಿದದ್ದೇ ತಿಳಿಯಲಿಲ್ಲ. ಬೀದಿ ದೀಪಗಳ ಬೆಳಕಿಗೆ ಸೆಡ್ಡುಹೊಡೆದಂತೆ ಬೆಳದಿಂಗಳು ನಗುತಿತ್ತು. ಜನರೆಲ್ಲಾ ಅದೇನೋ ಸಂಭ್ರಮದಲ್ಲಿ ಓಡಾಡುತ್ತಿದ್ದರು. ಮರುದಿನ ಸಂಕ್ರಾಂತಿ. ನಮ್ಮ ಇಡೀ road ಅದೇನೋ ಹೊಸತನದಿಂದ ಕಂಗೊಳಿಸುತ್ತಿತ್ತು. ಸುತ್ತಲೂ ಕಣ್ಣು ಹಾಯಿಸಿದವಳನ್ನ ಸೆಳೆದದ್ದು, terrace ನ ಇನ್ನೊಂದು ಮೂಲೆಯ ಬೆಂಚಿನ ಮೇಲೆ ಕುಳಿತು ಬೀದಿಯ ತುದಿಯನ್ನೇ ದಿಟ್ಟಿಸುತ್ತಾ ಯಾರದೋ ಬರುವಿಕೆಗಾಗಿ ಕಾಯುತ್ತಿರುವಂತಿದ್ದ ಹೊಳಪುಳ್ಳ ಕಂಗಳ ಅಜ್ಜಿ. ಅದ್ಯಾಕೋ ನಂಗೆ ಆಕೆಯನ್ನ ಮಾತಾಡಿಸಬೇಕು ಅಂತ ಅನ್ನಿಸಿತು. ಅವರ ಹತ್ತಿರ ಹೋಗಿ ನಿಂತೆ ಏನೋ ತುಂಬಾ ಪರಿಚಯದವಳಂತೆ. ನನ್ನನ್ನ ನೋಡುತ್ತಿದ್ದಂತೆಯೇ ಬೊಚ್ಚು ಬಾಯಿಂದ ನಗುವೊಂದು ಚಿಮ್ಮಿ "ಅಯ್ಯೋ ಚಿನ್ನಮ್ಮ, ಅದೆಷ್ಟು ಮುದ್ದಾಗಿದೀಯ" ಅಂತ ಕೈ ಅರಳಿಸಿ ದೃಷ್ಟಿ ತೆಗೆದು ಲಟಿಕೆ ಮುರಿದರು. ಆ ಸ್ಪರ್ಶದಲ್ಲಿ, ಆ ನಗುವಲ್ಲಿ ಅದೇನೇನೋ ವಿಶೇಷತೆ ಇದೆ ಅನ್ನಿಸಿತು. ಹಾಗೇ ಅವರ ಪಕ್ಕದಲ್ಲಿ ಕುಳಿತೆ.

"ಅಜ್ಜಿಗೆ ಮಕ್ಕಳೆಂದರೆ ತುಂಬಾ ಇಷ್ಟ ಕಣೆ. ನಮ್ಮ ಪಕ್ಕದ ಮನೆ ಅಜ್ಜಿ ಇವರು. ನೀವಿಬ್ಬರೂ ಮಾತಾಡ್ತಾ ಇರಿ. ನಮ್ಮಮ್ಮ ಯಾಕೋ ಕರೀತಾ ಇದಾರೆ. ಹೋಗಿ ಬರುತ್ತೇನೆ" ಎಂದು ನನ್ನ ಗೆಳತಿ ಕೆಳಗಡೆ ಹೋದಳು.

ನಮ್ಮಿಬ್ಬರ ಸಂಭಾಷಣೆ ಮುಂದುವರೆದಿತ್ತು.
ನಾನು: ಅಜ್ಜಿ ನಿಮ್ಮನೇಲಿ ಸಂಕ್ರಾಂತಿ ಇಲ್ಲ್ವಾ? ಯಾಕಿಷ್ಟು ಸಪ್ಪೆಯಾಗಿ ಇಲ್ಲಿ ಕುಳಿತಿದೀರಾ?
ಅಜ್ಜಿ: ಯಾಕಿಲ್ಲಾ? ಹಬ್ಬವನ್ನ ಮನೇಲಿ ಮಾಡ್ತಾರೆ. ಆದರೆ ನನಗೆ ಸಂಕ್ರಾಂತಿ ಎಲ್ಲ ಮುಗಿದು ಎಷ್ಟೋ ಕಾಲ ಆಯಿತು.
ಅಜ್ಜಿ ಅದ್ಯಾವುದೋ ಮಾಸದ ನೆನಪುಗಳ ಮದ್ಯೆ ಹುದುಗುತ್ತಾ ಇದ್ದಾರೆ ಅನ್ನಿಸ್ತು. ನಾನ್ ಹೇಗೆ ಮುಂದುವರೆಸಬೇಕು ಅಂತ ತಿಳಿಯದೆ ಅವರನ್ನೇ ನೋಡುತ್ತಿದ್ದೆ. ನಂತರ ಅವರೇ ಮುಂದುವರೆಸಿದರು.

ಅಜ್ಜಿ: ಈಗ ನಾನ್ ಇರೋದು ನನ್ನ ಮಗಳ ಮನೆಯಲ್ಲಿ. ನನ್ನ ಮಗಳು-ಅಳಿಯ ನನ್ನನ್ನ ಚನ್ನಾಗೇ ನೋಡಿಕೊಳ್ಳುತ್ತಾರೆ. ಆದರೂ ಅದೇನೋ ಅಪೂರ್ಣತೆ. ನಂಗೆ ಒಬ್ಬ ಮಗ ಮತ್ತೆ ಮಗಳು. ಅವತ್ತೂ ಅಷ್ಟೇ ಮರುದಿನ ಅಂದ್ರೆ ಸಂಕ್ರಾಂತಿ. ಆಗ ತಾನೇ ಕಾಲೇಜು ಮುಗಿಸಿದ್ದ ಮಗ, ಬೇರಾವುದೋ ಜಾತಿಯ ಹುಡುಗಿಯನ್ನ ಪ್ರೀತಿಸುತ್ತಾ ಇದೀನಿ, ನಾನ್ ಅವಳನ್ನೇ ಮದುವೆಯಾಗೋದು ಅಂತ ಖಡಾ-ಖಂಡಿತವೆನ್ನುವಂತೆ ಹೇಳಿಬಿಟ್ಟ. ನನಗೆ ಸುತಾರಾಂ ಇಷ್ಟ ಇರಲಿಲ್ಲ. ನಮ್ಮಿಬ್ಬರ  ನಡುವೆ ತುಂಬಾನೇ ಮಾತಿನ ಪೈಪೋಟಿಯಾಯಿತು. ಅವತ್ತು ದಿನವಿಡೀ ಮನೆಯಲ್ಲಿ ಇದೇ ಜಗಳ. ಕೊನೆಗೊ ನಾನು ಒಪ್ಪಿಕೊಳ್ಳಲಿಲ್ಲ. ಅವತ್ತು ರಾತ್ರಿ ಮಲಗಿದಾಗ ಇದೇ ಚಿಂತೆಯಲ್ಲಿ ನಿದ್ರೆ ಹತ್ತಿರವೂ ಸುಳಿಯಲಿಲ್ಲ. 'ಇವರು ಇದ್ದಿದ್ರೆ' ಅಂತ ಅನಿಸ್ತು ಒಂದ್ಸಲ. ಯೋಚನೆ ಮಾಡಿ ಮಾಡಿ ಬೆಳಗಿನ ಜಾವದಲ್ಲಿ 'ಆದದ್ದು ಆಗಲಿ ಎಲ್ಲಾ ದೇವರಿಚ್ಛೆ, ಅವರಿಬ್ಬರಿಗೂ ಮದುವೆ ಮಾಡಿಸಿದರಾಯಿತು' ಅಂತ ನಿರ್ದರಿಸುವಾಗಲೇ ಜಾವದ ಒಂದು ನಿದ್ದೆ ಸುಳಿದದ್ದು. ಬೆಳಗೆ ಎದ್ದು ನೋಡಿದರೆ ನನ್ನ ಮಗ ಕಾಣಲೇ ಇಲ್ಲ. ಇಡೀ ಮನೆ ಹುಡುಕಿದರೂ ಅವನ ಸುಳಿವಿರಲಿಲ್ಲ. ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯನ್ನ ಬರಿದುಗೊಳಿಸಿ ಹೊರಟುಹೋದವನ ಸುಳಿವು ಮತ್ತೆ ಯಾವತ್ತೂ ಸಿಗಲಿಲ್ಲ. ಇದ್ದೊಬ್ಬ ಮಗಳನ್ನ ಮದುವೆ ಮಾಡಿ, ಬರಿದಾದ ಮನೆ, ಅಲ್ಲಿಯ ನೆನಪುಗಳನ್ನೆಲ್ಲ ನಮ್ಮ ಹಳ್ಳಿಯ ಮನೆಯಲ್ಲೇ ಬಿಟ್ಟು ಮಗಳೊಂದಿಗೆ ಇಲ್ಲಿಗೆ ಬಂದು ಬಿಟ್ಟೆ. ಅಷ್ಟರ ಮೇಲೆ ಪ್ರತೀ ಸಂಕ್ರಾಂತಿ ದಿನ ಹೀಗೆ ಕಾಯುತ್ತಾ ಇದೀನಿ ಯಾವತ್ತಾದರೂ ನನ್ನ ಮಗ ಬರಬಹುದೆಂದು. ಅಜ್ಜಿಯ ಕಣ್ಣಾಲಿಗಳು ತುಂಬಿ ಬಂದಿದ್ದವು.

ಸುತ್ತಲೂ ಸಂಭ್ರಮದ ವಾತಾವರಣ ಇದ್ದಿದ್ದರೂ terrace ನ ಮೇಲೆ ಮಾತ್ರ ಸ್ಮಶಾನ ಮೌನದ ಭೀತಿ ಕಾಡಿದಂತಿತ್ತು.

ಸಮಯವಾಗಿದ್ದರಿಂದ ನಾನು ಮನೆಗೆ ಹೊರಟೆ. ಅಜ್ಜಿ ಅದೆಷ್ಟು ಹೊತ್ತು ಅಲ್ಲೇ ಕುಳಿತಿದ್ದಳೋ ಗೊತ್ತಿಲ್ಲ. ರಾತ್ರಿ ಮಲಗಿದ ಮೇಲೂ ಕನಸಲ್ಲೆಲ್ಲ ಅಜ್ಜಿ ಅಳುತ್ತಾ ಇರುವಂತೆ ಬಾಸವಾಗುತಿತ್ತು. ಮರುದಿನ, ಹಬ್ಬದ ಕಾರಣಕ್ಕೆ ನಮ್ಮನೆಯಲ್ಲಿ ಎಂದಿಗಿಂತ ಬೇಗನೆ ಬೆಳಗಾಗಿತ್ತು. ಬೆಳಗಿನ ಕೆಲಸಗಳನ್ನೆಲ್ಲ ಮುಗಿಸಿ ಅಪ್ಪ-ಅಮ್ಮ ಇಬ್ಬರೂ ಎಲ್ಲೋ ದೂರ ಪ್ರಯಾಣ ಬೆಳೆಸುವ ತಯಾರಿಯಲ್ಲಿರುವಂತೆ ಕಂಡರು. ಏನಿದೆಲ್ಲ ಅಂತ ಆಶ್ಚರ್ಯವಾಗಿ ನೋಡುತಿದ್ದ ನನ್ನನ್ನ ನೋಡಿ ಅಪ್ಪ ಕತೆ ಹೇಳೋಕೆ ಶುರುಮಾಡಿದರು.
"ನಾವು ಮೂರೂ ಜನ ಇವತ್ತು ನಮ್ಮ ಹಳ್ಳಿಗೆ ಹೋಗ್ತಾ ಇದೀವಿ. ನೀನ್ಯಾವಾಗಲೂ ಕೇಳುತ್ತಾ ಇದ್ಯಲ ನಿನ್ನ ಅಜ್ಜಿಯ ಬಗ್ಗೆ...ಅವರನ್ನ ನೋಡೋಕೆ. ಇದು 25 ವರ್ಷದ ಹಿಂದಿನ ಕತೆ………………………..!"


ಅಪ್ಪ ಕತೆ ಹೇಳಿ ಮುಗಿಸುವಾಗ ಎಲ್ಲರ ಮನೆ-ಮನಸ್ಸಲ್ಲೂ ಸಂಕ್ರಾಂತಿಯ ಸಂಭ್ರಮ ಮತ್ತೆ ಬಂದಂತಾಗಿತ್ತು.
                                                                                                         

ಅವಳೆಂದರೆ... 
ತನಗೆ ಮಗುವಾದಾಗ ಮತ್ತೆ ಹುಟ್ಟೋ ಅಮ್ಮ. ಮಮತಾಮಯಿ, ಸ್ನೇಹಮಯಿ, ಕರುಣಾಮಯಿ. ಅವಳ ಉದಾರತೆಗೆ, ಅವಳು ನೀಡುವ ಪ್ರೀತಿಯ ಅಮೃತಕ್ಕೆ ಸರಿಸಾಟಿ ಯಾವುದಾರೂ ಉಂಟಾ?? ತನ್ನ ಮಕ್ಕಳಿಗಾಗಿ ಜೀವನದ ಸರ್ವಸ್ವವನ್ನೂ ಸವೆಸಿಬಿಡಬಲ್ಲಳು. ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಬದುಕನ್ನ ಅರಸಿ ಹೊರಟರೂ ಅವರು ಮತ್ತೆ ಮಗುವಾಗಿ ತನ್ನ ಮಡಿಲಿಗೆ ಬಂದೇ ಬರ್ತಾರೆ ಅಂತ ಉಸಿರು ಬಿಗಿ ಹಿಡಿದು ಕಾದುಬಿಡುತ್ತಾಳೆ ಬೇಕಿದ್ರೆ. ಇಡೀ ಲೋಕವನ್ನ ತನ್ನ ಮೂರ್ತ ಪ್ರೇಮದೆಡೆಗೆ ಸೆಳೆಯೋ ವಿಶಾಲ ಹೃದಯಿ ಆಕೆ.
ಅವಳೆಂದರೆ... ನಮಗೆಲ್ಲಾ ಜಗತ್ತಿನ ಬೆಳಕನ್ನ ತೋರಿಸಿ ತಾನು ಕತ್ತಲೆಯಲ್ಲೇ ನಿಂತು ನಮ್ಮನ್ನ ನೋಡಿ ಖುಷಿ ಪಡುವವಳು.
ಅವಳೆಂದರೆ... ಸದಾ ಒಳಿತನ್ನ ಹರಸಿ ನಮ್ಮನ್ನ ಪೋಷಿಸಿ ಪೊರೆಯೊ ಜೀವ.
ಅವಳೆಂದರೆ .....ಎಲ್ಲವೂ !

------------------------

ಜಗತ್ತಿನ ಎಲ್ಲಾ ತಾಯಂದಿರಿಗೂ "ಅವಳೆಂದರೆ" ಕಥಾ ಹಂದರದ ಈ ಸಂಚಿಕೆ ಸಮರ್ಪಣೆ.


                                                                                                          -ಮೇದಿನಿ ಎಂ ಭಟ್
    

   


No comments: