Wednesday 15 March 2017

ಅವಳೆಂದರೆ...!!! ಸಂಚಿಕೆ ೨


ಸಂಚಿಕೆ ೨

ಒಂದು ವಾರದ ರಜೆಗೆಂದು ಊರಿಗೆ ಬಂದವಳು ಇವತ್ತು ಅದೇ ಉದ್ಯಾನ ನಗರಿಗೆ ಪ್ರಯಾಣ ಬೆಳೆಸೋ ತರಾತುರಿಯಲ್ಲಿದ್ದೆ. ನನ್ನದೇ ಬೋಗಿಯನ್ನು ಹತ್ತಿದ ನಮ್ಮೂರಿನ ಕೊನೆಮನೆ  ಅಕ್ಕನನ್ನ ನೋಡಿ ಅದೇನೋ ಎಲ್ಲಿಲ್ಲದ ಖುಷಿ ಆಯಿತು. ಬಹುಶ ಬೆಂಗಳೂರಿಗೆ ಹೋಗೋ ತನಕ ಒಳ್ಳೆ company ಸಿಕ್ಕಿತು ಅನ್ನೋ ಸ್ವಾರ್ಥವಿದ್ದರೂ ಇರಬಹುದು. ನಮ್ಮಿಬ್ಬರ ಮಧ್ಯೆ ಉಭಯ ಕುಶಲೋಪರಿಯ ವಿನಿಮಯ ಮುಗಿದು ನಮ್ಮಿಬ್ಬರ ಜೀವನದ ಆಗು-ಹೋಗುಗಳ ಬಗ್ಗೆ ಆಗಲೇ ಮಾತು ಶುರುವಾಗಿತ್ತು. ಆಗಲೇ ಆಕೆ ತನ್ನ ಬದುಕಿನ ಬವಣೆಗಳನ್ನ ಅವಳು ಹೇಳೋಕೆ ಶುರುಮಾಡಿದ್ದು.
--------

ನನಗನ್ನಿಸೋ ಪ್ರಕಾರ ನಾನು ಇತ್ತೀಚೆಗೆ ಯಾವುದಕ್ಕೂ ಕಣ್ಣೀರು ಹಾಕುತ್ತಿಲ್ಲ. ಎಷ್ಟೊಂದು sensitive ಆಗಿದ್ದೋಳು ಅಲ್ವಾ ನಾನು? ಏನಾಗಿದೆ ನನಗೆ? ಕಣ್ಣೀರು ಬತ್ತಿ ಹೋಗಿದ್ಯಾ? ಅಥವಾ ಅಳುವುದಕ್ಕೆ ಕಾರಣ ಇಲ್ವಾ? ಇಲ್ಲ..ಇಲ್ಲಾ ಅದು ಹಾಗಲ್ಲ. ನಾನು ಜೀವನ ಎದುರಿಸುವುದನ್ನ ಕಲಿತಿದ್ದೀನಿ. ಹಾಗಂತ ತುಂಬಾನೆ ಖುಷಿ ಆಗಿದ್ದೀನಿ ಅಂತಲ್ಲ. ಬದುಕನ್ನ ಸ್ವತಂತ್ರವಾಗಿ ಎದಿರಿಸುವುದನ್ನ ರೂಢಿಸಿಕೊಂಡಿದ್ದೀನಿ. ಪರಾಧೀನತೆಯಲ್ಲಿನ ಆ ಕಸಿವಿಸಿಯಿಂದ ಮುಕ್ತಳಾಗಿದ್ದೀನಿ. ಇದಕ್ಕೆ ನನ್ನನ್ನು ನಾನೇ ಪ್ರಶಂಸಿಸಿಕೊಳ್ಳಬೇಕೋ ಅಥವಾ ನಾನ್ಯಾಕೆ ಈ ಥರ  drastic change ಆದೆ ಅಂತ ಬೇಜಾರ್ ಮಾಡ್ಕೊಳೋದಾ ಒಂದೂ ಗೊತ್ತಾಗ್ತಿಲ್ಲ . ಬಹುಶ 3 ವರ್ಷ ಆಗಿತ್ತು ಅನ್ಸತ್ತೆ ನಾನು ಮನಸಾರೆ ನಕ್ಕು. ಸ್ವಚ್ಚಂದವಾಗಿದ್ದವಳನ್ನ ಬಂದಿ ಮಾಡಿದ್ದು ಅವನು ಕಟ್ಟಿದ ತಾಳಿ.  ಏಳು ಜನ್ಮ ಜೊತೆ ಇರ್ತೀನಿ ಅಂತ ಪ್ರಮಾಣ ಮಾಡಿ ಏಳು ತಿಂಗಳು ಸಹ ಅವನು ಅವನಾಗಿ ನನ್ನೊಡನೆ ಇರಲಿಲ್ಲ. ಪ್ರತೀ ಹೆಣ್ಣಿಗೂ ಒಂದು ಗಂಡು ಅಂತ ಸ್ವರ್ಗದಲ್ಲೇ ನಿರ್ಧಾರ ಮಾಡಿರ್ತಾನಂತೆ ಆ ದೇವರು. ಹಾಗಾದರೆ ನಾನಿಲ್ಲಿ ಇವನೊಂದಿಗೆ ಆಗಿದ್ದು ನಕಲಿ ಮದುವೆಯ? ನಮ್ಮ ಪ್ರೀತಿ ಸುಳ್ಳಾ ಹಾಗಾದರೆ?

ಎಷ್ಟೇ ಬೇಡ ಅಂತ ಅಂದುಕೊಂಡರೂ ಮನಸ್ಸು ಮತ್ತೆ ಮತ್ತೆ ಅವನ ನೆನಪಿನೆಡೆಗೇ ವಾಲುತ್ತದೆ. ಮನೆಯವರೆಲ್ಲಾ ಬೇಡ ಅಂದರೂ ಹಠ ಹಿಡಿದು ಕೆಲಸಕ್ಕೆ ಸೇರುತ್ತೀನಿ ಅಂತ ಬೆಂಗಳೂರಿಗೆ ಬಂದೆ. ಪುಟಾಣಿ ಹಕ್ಕಿ ಮರಿಯೊಂದು ರೆಕ್ಕೆ ಬಲಿತು ಆಕಾಶದಲ್ಲಿ ಮೊದಲ ಬಾರಿಗೆ ಹಾರಿದಂತಹ ಅನುಭವ. ಒಂದೇ ಮನೆಯವರಂತೆ ಕಾಣೋ PG ಸ್ನೇಹಿತರು, ನಾನು ಮಾಡೋದು ಚಿಕ್ಕ ಕೆಲಸವಾದರೂ ಅದೇನೋ ವಿಶೇಷ ಅನುಭವ ನೀಡುತ್ತಿದ್ದ MNC Company, weekend ಮಸ್ತಿ... ಹೀಗೆ ಖುಷಿಯ ಮಹಾಪೂರಕ್ಕೆ ಪಾರವೇ ಇರಲಿಲ್ಲ. ಹೀಗಿರುವಾಗಲೇ ನಮ್ಮ PGಯ ಪಕ್ಕದ ಮನೆಯ ಇವನು ಪರಿಚಯವಾಗಿದ್ದು. ನಾನು ಅಂತಲ್ಲ ಇಡೀ PGಯವರಿಗೆಲ್ಲ ಅವರ ಮನೆಯವರು ಚಿರಪರಿಚಿತ. ಆದರೆ ಅವನಿಗೆ ನನ್ನ ಮೇಲೆ ಅದೇನೋ ಬೇರೆ ರೀತಿಯ ಆಕರ್ಷಣೆ ಇದೆ ಅಂತ ಅವನ ಕಣ್ಣಿನ ಭಾಷೆಗಳು ಹೇಳುತಿದ್ದವು. ಹಾ.. ಅದನ್ನು ನನ್ನ ಹೃದಯ ಕೂಡ ಬಹಳ ಬೇಗ ಅರ್ಥಮಾಡಿಕೊಂಡುಬಿಟ್ಟಿತ್ತು. ಪರಿಚಯ ಸ್ನೇಹಕ್ಕೆ, ಸ್ನೇಹ ಪ್ರೀತಿಗೆ ತಿರುಗುವುದಕ್ಕೆ ಹೆಚ್ಚೇನೂ ಸಮಯ ತೆಗೆದುಕೊಳ್ಳಲಿಲ್ಲ. ಎಲ್ಲಾ ಪ್ರೇಮಪಕ್ಷಿಗಳಂತೆ ಪಾರ್ಕ್, ಸಿನೆಮಾ, ಮಾಲ್ ಎಲ್ಲಾ ಕಡೆ ಒಟ್ಟಿಗೆ ಓಡಾಡೋದಕ್ಕೆ ಶುರು ಮಾಡಿದ್ವಿ. ಕೊನೆಗೆ ಮನೆಯವರ ಭಿನ್ನಾಭಿಪ್ರಾಯದ ನಡುವೆಯೂ ನಮ್ಮ ಮದುವೆ ನಡೆದೇ ಹೋಯಿತು.

ಎಲ್ಲಾ ಚೆನ್ನಾಗೆ ಇತ್ತು ಅನ್ನುವಷ್ಟರಲ್ಲಿ ಅದ್ಯಾಕೋ ಮದುವೆ ಆದ ಮೇಲೆ ಅವನು ವಿಚಿತ್ರವಾಗಿ ಆಡೋಕೆ ಶುರು ಮಾಡಿದ್ದ. ಪ್ರತೀ ವಿಷಯಕ್ಕೂ ನನ್ಮೇಲೆ ಕೋಪಿಸಿಕೊಳ್ಳೋದು, ಸರಿಯಾಗಿ ಮನೆಗೆ ಬರದೇ ಇರೋದು, ನನ್ನನ್ನ ವಿನಾಕಾರಣ ವೈರಿಯಂತೆ ನೋಡೋದು. ಇದೆಲ್ಲ ದಿನನಿತ್ಯ ನಮ್ಮನೆಯಲ್ಲಿ ನಡೆಯೋ ದಿನಚರಿಯಂತೆ ಆಗಿ ಬಿಟ್ಟಿತ್ತು. ಮದುವೆ ಆದ್ಮೇಲೆ ಅವನಿಂದ ಪ್ರೀತಿ ಎನ್ನೋದು ಕೇವಲ 'ನಿರೀಕ್ಷೆ'ಯಾಗೇ ಉಳಿದುಹೋಯಿತು.ಇವತ್ತು ಸರಿ ಹೋಗ್ತಾನೆ, ನಾಳೆ ಸರಿಹೋಗ್ತಾನೇ ಅನ್ನೋ ಹುಸಿ ನಂಬಿಕೆಯಲ್ಲೇ ಒಂದು ವರ್ಷ ಕಳೆದುಹೋಯಿತು. ಅವನ ಈ ನಿಜ ಸ್ವಭಾವ ಮದುವೆಗೆ ಮುಂಚೆ ಪ್ರೀತಿಸುವಾಗ ಯಾಕೆ ಗೊತ್ತಾಗಲಿಲ್ಲ ಅಂತ ಅದೆಷ್ಟೇ ಯೋಚನೆ ಮಾಡಿದ್ರೂ ಉತ್ತರ ಮಾತ್ರ ಶೂನ್ಯವಾಗಿತ್ತು. ಆಮೇಲೆ ಬಂಗಾರದಂತ ಮಗು ಮನೆ ತುಂಬಿದರೂ ಕೂಡ ಅವನ ವರ್ತನೆಯಲ್ಲಿ ಬದಲಾವಣೆನೇ ಆಗಲಿಲ್ಲ. ಅವನೊಂದಿಗೆ ದಿನ ಕಳೆಯೋದು ಸಾಧ್ಯಾನೇ ಇಲ್ಲ ಅನ್ನಿಸಿದಾಗ ಅವನನ್ನ, ಅವನ ಮನೆಯನ್ನ ಕೊನೆಗೆ ನಾ ಇಷ್ಟಪಟ್ಟು ಸೇರಿದ ಬೆಂಗಳೂರನ್ನ ಬಿಟ್ಟು ಹಳ್ಳಿಯ ಅಪ್ಪನ ಮನೆಗೆ ಬಂದುಬಿಟ್ಟೆ. ಅವನು ಅದಕ್ಕೂ care ಮಾಡಲಿಲ್ಲ. ಮನಸ್ಸು ದಿನೇ ದಿನೇ ದುರ್ಬಲಗೊಳ್ಳುತ್ತಲೇ ಇತ್ತು. ಇದೇ ಯೋಚನೆಯಲ್ಲಿ ಹುಚ್ಚಿಯಾಗಿ ಬಿಡುತ್ತಿದ್ದೆನೇನೋ 

ಆದರೆ ಅದೊಂದು ಸಂಜೆ....

ನಮ್ಮನೆಯ ಪಕ್ಕದಲ್ಲಿದ್ದ ನದಿದಂಡೆಯ ಮೇಲೆ ಕುಳಿತಿದ್ದೆ. ನೆರೆಮನೆಯ ಮಕ್ಕಳೊಂದಿಗೆ ನನ್ನ ಮಗನೂ ಆಟವಾಡುತಿದ್ದ. ನದಿಯ ಆಚೆಯ ದಡವನ್ನೇ ದಿಟ್ಟಿಸುತಿದ್ದೆ. ಅದೇನೋ ಅವತ್ತು ಹೊಸತರದಂತೆ ಕಾಣಿಸ್ತು. ಎಲ್ಲೆಲ್ಲೂ ಹಸಿರು ತುಂಬಿತ್ತು. ಅರೆ... ನಿನ್ನೆ ಬಂದಾಗ ಹಿಂಗಿರಲಿಲ್ಲ ಅಲ್ವಾ? ಅಥವಾ ನಾನ್ ಗಮನಿಸಿರಲಿಲ್ವಾ? ಇಲ್ಲ ಚೈತ್ರಮಾಸವಿರಬೇಕು. ಬರಡಾಗಿದ್ದ ಮರಗಳು ಹೊಸಚಿಗುರಿನಿಂದ ಕಂಗೊಳಿಸುತ್ತ ಇದೆ. ಮುಳುಗುತಿದ್ದ ಆ ಸೂರ್ಯನ ತಂಪಾದ ಕಿರಣಗಳು ಭೂಮಿಯ ಹಸುರಿನ ಚೆಲುವನ್ನ ಇಮ್ಮಡಿಗೊಳಿಸಿತ್ತು. ಗೂಡು ಸೇರುವ ಅವಸರದಲ್ಲಿದ್ದ ಹಕ್ಕಿಗಳು ತಮ್ಮದೇ ಭಾಷೆಯಲ್ಲಿ ಏನೇನೋ ಸಂದೇಶ ವಿನಿಮಯಮಾಡಿಕೊಂಡಂತಿತ್ತು. ಇತ್ತೀಚೆಗೆ ಇವತ್ತೇ ಅನಿಸುತ್ತೆ ಮನಸ್ಸು ಸ್ವಲ್ಪ ಶಾಂತವಾಗಿರೋದು, ಖುಷಿಯಾಗಿರೋದು. ಪಕ್ಕದಲ್ಲೇ ಆಡುತಿದ್ದ ಮಗನನ್ನ ನೋಡಿದೆ. ಅರಿಯದ ಖುಷಿಯೊಂದು ಮುಗುಳುನಗುವಾಗಿ ಹೊರಬಂತು. ನಾನ್ಯಾಕೆ ನನ್ನ ಬದುಕನ್ನ ಕಟ್ಟಿಕೊಳ್ಳಬಾರದು? ಸಂಜೆ ಆಯಿತೆಂದರೆ ಮುಳುಗಲೇಬೇಕು ಅಂತ ಗೊತ್ತಿದ್ದರೂ ದಿನಬೆಳಗ್ಗೆ ಅದೇ ಉತ್ಸಾಹದಿಂದ ಸೂರ್ಯ ಮತ್ತೆ ಹುಟ್ಟಿ ಬರಲ್ವಾ? ಒಣಗಿರೋ ಮರ ಕೂಡ ನವವಸಂತಕ್ಕಾಗಿ ಕಾಯುತ್ತದಂತೆ. ನನ್ನ ಭಾವನೆಗೆ, ನನ್ನ ಪ್ರೀತಿಗೆ ಬೆಲೆನೇ ಕೊಡದ ಅವನ ನೆನಪಲ್ಲಿ ನನ್ನ ಬದುಕನ್ನ ಹಾಳು ಮಾಡಿಕೊಳ್ಳೋದು ಅದೆಷ್ಟು ಸರಿ? ಅವನು ನನ್ನ ಬದುಕಿಗೆ ಬರುವ ಮುಂಚೆ ಬದುಕಿರಲಿಲ್ವಾ ನಾನು? ಅದಕ್ಕಿಂತ ಚನ್ನಾಗೇ ಬದುಕಬಲ್ಲೆ


Hmmm  ನಾನು ಎಲ್ಲಿ ಸೋತಿದ್ದೆನೋ ಅಲ್ಲೇ ಮತ್ತೆ ಬದುಕನ್ನ ಪ್ರಾರಂಭಿಸುತ್ತೀನಿ. ಕಳೆದುಹೋದ ಕನಸುಗಳನ್ನ ಮತ್ತೆ ಹುಡುಕಿಕೊಳ್ಳುತ್ತೀನಿ. ಮತ್ತೆ ಗೆದ್ದು ತೋರಿಸ್ತೀನಿ. ಅವತ್ತೇ ನಿರ್ಧಾರ ಮಾಡಿಬಿಟ್ಟೆ..ಮತ್ತೆ ಬದುಕಿಬಿಡಬೇಕು ಎಂದು. ಮನೆಗೆ ಹೋಗಿ ಅಪ್ಪ-ಅಮ್ಮನ ಹತ್ತಿರ ನಾ ಮತ್ತೆ ಬೆಂಗಳೂರಿಗೆ ಹೋಗಿ ಕೆಲಸ ಮಾಡ್ತೀನಿ ಅಂತ ನನ್ನ ನಿರ್ಧಾರ ತಿಳಿಸಿದೆ. ಮಗಳು ಈಗಲಾದರೂ ಚೇತರಿಸಿಕೊಂಡಳಲ್ಲ ಅನ್ನೋ ಖುಷಿ ಅವರ ಕಂಗಳಲ್ಲಿ ಇತ್ತು. 
-----

ಇವತ್ತಿಂದ ನಂದೂ ಅಂತ ಹೊಸದೊಂದು ಜೀವನ ಶುರುವಾಗ್ತಾ ಇದೆ. ನನ್ನ ಪ್ರೀತಿಗೆ ಮೋಸವಾಯಿತಲ್ಲ ಅನ್ನೋ ನೋವಿಗೆ ಬದಲಾಗಿ ನಾನು ಏನನ್ನಾದರೂ ಸಾದಿಸುತ್ತೀನಿ ಅನ್ನೋ ಛಲವಿದೆ. ನನ್ನ ಮುಂದಿನ ಬದುಕು ಚೆನ್ನಾಗಿದ್ದೇ ಇರತ್ತೆ ಅಂತ ನಂಗ್ಯಾಕೋ ಬಲವಾಗಿ ಅನ್ನಿಸುತ್ತಿದೆ. 
-----

Train ನಲ್ಲಿ ನನ್ನೆದುರು ಕುಳಿತು ತನ್ನ ಕಥೆಯನ್ನ ಬಿಚ್ಚಿಟ್ಟಿದ್ದ ಆಕೆಯ ಕಂಗಳಲ್ಲಿ ಅದೇನೋ ಭರವಸೆಯ ಬೆಳಕೊಂದು ಟಿಸಿಲೊಡೆದಂತಾಯಿತು. ಓಡುತಿದ್ದ Trainನ ಕಿಟಕಿಯ ಸರಳಿನಿಂದಾಚೆಗಿನ ಪ್ರಪಂಚವನ್ನ ನೋಡ್ತಾ ಇದ್ದೆ. ಮನಸ್ಸಿನ ಪೂರ್ತಿ ಈಗಷ್ಟೇ ಕೇಳಿದ ಆಕೆಯ ಕಥೆಯೇ ಗುನುಗುಡುತ್ತಿತ್ತು. 

ಜೀವನದಲ್ಲಿ ಎದುರಾಗೋ ಕಷ್ಟಗಳು ಒಮ್ಮೊಮ್ಮೆ ನಮ್ಮನ್ನ ಮುಳುಗಿಸಲುಬಹುದು ಅಥವಾ ಛಲದಿಂದ ಹೊರಡೋ ಶಕ್ತಿಯನ್ನ ಕೊಡಬಹುದು. ಎಲ್ಲಾ  ನಿರ್ಧಾರ ಆಗೋದು ಆತ್ಮಬಲದ ಮೇಲೆ. ಇವಳೂ ಕೂಡ ಮುಳುಗಬಹುದಿತ್ತೇನೋ, ಆದರೆ ಆಕೆ ಹಾಗೆ ಆಗೋದಕ್ಕೆ ಬಿಡಲಿಲ್ಲ. ಯಾಕೆ ಗೊತ್ತಾ...?


ಅವಳೆಂದರೆ... 
ಕ್ಷಮಯಾಧರಿತ್ರಿ. ಬಾಳಲ್ಲಿ ಕುಗ್ಗಿಸೋ ಕಷ್ಟ ಬಂದರೂ ಅದನ್ನ ಹೊಡೆದೋಡಿಸಿ ಮತ್ತೆ ಎದ್ದು ನಿಲ್ಲುತ್ತೇನೆ ಅನ್ನೋ ಗಟ್ಟಿಗಿತ್ತಿ. ಮನಸ್ಸು ಮೃದುವಾಗಿರಬಹುದು, ಸೂಕ್ಷ್ಮವಾಗಿರಬಹುದು. ಆದರೆ ಬದುಕುವ ಕಲೆಯಿದೆಯಲ್ಲ? ಅದೇ ಸಾಕು ಅವಳನ್ನ ಮತ್ತೆ ಬದುಕಿಸಿಬಿಡುತ್ತದೆ. ಅವಳೆಂದರೆ ಬದುಕಿನ ಎಲ್ಲವನ್ನು ಎದುರಿಸಬಲ್ಲ ಶಕ್ತಿಯ ಆಗರ. 
ಅವಳೆಂದರೆ ಕಷ್ಟಗಳಿದ್ದರೂ ಮತ್ತೆ ಅರಳಿನಿಲ್ಲೋ ನಿತ್ಯ ಮಲ್ಲಿಗೆ. 
ಅವಳೆಂದರೆ ಎಲ್ಲವೂ....!!!

ಏನೋ ಹೇಳೋಣವೆಂದು ಅವಳೆಡೆಗೆ ತಿರುಗಿದೆ. ಅಮ್ಮ-ಮಗ ಇಬ್ಬರು ಬೆಚ್ಚಗೆ ಮಲಗಿ ಕನಸು ಕಾಣುತ್ತಿರುವಂತಿತ್ತು. "ದೇವರೇ ಅವಳ ಕೈ ಬಿಡಬೇಡ" ಅಂತ ತಣ್ಣಗೆ ಪ್ರಾರ್ಥಿಸಿದೆ. 
                                
                                    -ಮೇದಿನಿ. ಎಂ. ಭಟ್ 

 


No comments: